ಯಕ್ಷಗಾನ - ಭಾರತೀಯ ಸಂಸ್ಕೃತಿ ಪ್ರತೀಕ : ಬಳ್ಕೂರು ಕೃಷ್ಣ ಯಾಜಿ
ಲೇಖಕರು : ಕನ್ನಡಪ್ರಭ
ಗುರುವಾರ, ಜನವರಿ 23 , 2014
|
ಯಕ್ಷಗಾನ ಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಹೆಸರಾಂತ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಹೇಳಿದರು.
ಗುಣವಂತೆಯ ಯಕ್ಷಾಂಗಣದಲ್ಲಿ ಇಡಗುಂಜಿ ಯಕ್ಷಗಾನ ಮಂಡಳಿ ಏರ್ಪಡಿಸಿದ್ದ ಐದು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ನಾಲ್ಕನೇ ದಿನದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಯಾವ ನೆಲದಲ್ಲಿ ಕಲೆ ಅರಳುವುದಿಲ್ಲವೋ, ಪ್ರಜ್ವಲಿಸುವುದಿಲ್ಲವೋ ಆ ನೆಲ ಬರಡು ಬಿದ್ದಂತೆ ಎಂದ ಅವರು ತಾವಿಂದು ಯಕ್ಷಗಾನ ಕಲಾವಿದನಾಗಿ ಈ ಮಟ್ಟಕ್ಕೇರಲು ಕೆರೆಮನೆಯ ಮೂರು ಮುತ್ತುಗಳು ಕಾರಣ ಎಂದರು.
ಕೆರೆಮನೆ ಮೇಳದಲ್ಲಿ ಗೋಪಾಲವೇಷದಿಂದ ಆರಂಭಗೊಂಡ ತಮ್ಮ ಕಲಾಜೀವನ ಈವರೆಗೆ ಸಾಗಿಬರುವಲ್ಲಿ ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಗಜಾನನ ಹೆಗಡೆ ಎಂಬ ಈ ಮೂರು ಮುತ್ತುಗಳ ಪ್ರೋತ್ಸಾಹವೇ ಕಾರಣವಾಗಿದೆ. ಯಾರನ್ನು ಮೆಚ್ಚಿ ಈ ರಂಗಕ್ಕೆ ಬಂದಿದ್ದೇನೋ ಅವರಿಂದ ಸಿಕ್ಕ ಮೆಚ್ಚುಗೆಯೇ ತನ್ನ ಪಾಲಿಗೆ ಬಹುದೊಡ್ಡ ಪ್ರಶಸ್ತಿ ಎಂದರು.
ರಂಗಭೂಮಿಯ ಪಾವಿತ್ರ್ಯ ಕುರಿತು ಮಾತನಾಡಿದ ಅವರು, ಕಲೋಪಜೀವಿಯಾದಾಗ ಕೆಲವನ್ನು ಸಹಿಸಿಕೊಳ್ಳಬೇಕಾಗುತ್ತಿದೆ. ಯಕ್ಷಗಾನ ಕೇವಲ ಮನೋರಂಜನೆಗಾಗಿ ಅಲ್ಲದೇ ಮನೋವಿಕಾಸಕ್ಕೆ ಕಾರಣವಾಗಬೇಕು. ರಂಗಪಾವಿತ್ರ್ಯವನ್ನು ಇಂದಿಗೂ ಉಳಿಸಿಕೊಂಡ ಬಂದ ಮೇಳ ಇದ್ದರೆ ಅದು ಇಡಗುಂಜಿ ಮೇಳ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ಮಾತನಾಡಿ, ಯಾವುದೇ ಕಲಾ ಪ್ರಕಾರಗಳಲ್ಲಿ ಇಲ್ಲದ ವಿಶೇಷತೆ ಯಕ್ಷಗಾನದಲ್ಲಿದೆ. ಜನ ಬಯಸುತ್ತಾರೆಂದು ಯಕ್ಷಗಾನ ಕಲೆ ಎಂದೂ ಅಪದ್ಧವಾಗಬಾರದು. ಜನರ ಅಭಿರುಚಿಗಾಗಿ ಯಕ್ಷಗಾನ ಕಲೆಯಿಂದು ವ್ಯಾವಹಾರಿಕದತ್ತ ವಾಲುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, 80 ವರ್ಷಗಳಿಂದಲೂ ಕೆರೆಮನೆ ಮೇಳ ಪೌರಾಣಿಕ ಪ್ರಸಂಗಗಳಿಗೆ ಒತ್ತು ನೀಡಿ ಪ್ರದರ್ಶನ ನೀಡುತ್ತಿರುವುದು ಈ ಕಲೆಯ ಪಾವಿತ್ರ್ಯ ಉಳಿಸಿಕೊಂಡು ಬಂದಿರುವುದಕ್ಕೆ ಸಾಕ್ಷಿ ಎಂದರು.
ಪತ್ರಕರ್ತ ಎಚ್.ಬಿ. ರಾಘವೇಂದ್ರ ಮಾತನಾಡಿ, ನಾಡಿನ ಆತ್ಮೀಯತೆಯನ್ನು ಕಲೆ ವ್ಯಕ್ತಪಡಿಸುತ್ತಿದ್ದು ಕಲೆ ಜನಪರ, ಸಮಾಜಮುಖಿಯಾಗಿರಬೇಕು. ಈ ದಿಸೆಯಲ್ಲಿ ಕೆರೆಮನೆ ಮೇಳ ಗಮನಾರ್ಹ ಎಂದರು.
ವಿದ್ವಾಂಸ ಪ್ರೊ. ವಿ.ಆರ್. ಜೋಶಿ ಮಾತನಾಡಿ, ಯಕ್ಷಗಾನ ಪ್ರಭಾವವನ್ನು ಅಳಿಸಲಾಗದು. ಉತ್ಸವದ ಹಿಂದೆ ಉತ್ಸಾಹವಿದೆ. ಕೆರೆಮನೆ ಉತ್ಸವ ಉತ್ಸಾಹ ನಿರಂತರವಾಗಿರಲಿ. ಸಂಘಟಕರಿಲ್ಲದಿದ್ದರೆ ಕಲೆ ಬೆಳೆಯಲು ಸಾಧ್ಯವಿಲ್ಲ. ಸರ್ಕಾರ ಮಾಡದ ಕೆಲಸವನ್ನು ಶಿವಾನಂದ ಹೆಗಡೆ ಕೈಗೊಂಡಿರುವುದು ಶ್ಲಾಘನೀಯ. ಶುದ್ಧ ಕನ್ನಡ ಭಾಷೆ ಬೆಳೆಯಬೇಕೆಂದರೆ ಶುದ್ಧ ಲಾಲಿತ್ಯಪೂರ್ಣ ಕನ್ನಡ ಭಾಷೆಯನ್ನು ಒಳಗೊಂಡ ಯಕ್ಷಗಾನವನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ಅಭಿಪ್ರಾಯಿಸಿದರು.
ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ, ಗಣಪಯ್ಯ ಗೌಡ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಗಣ್ಯರಾದ ನರಸಿಂಹ ಹೆಗಡೆ ಹಳವಳ್ಳಿ, ಶಿರಳಗಿ ಶಿವಾನಂದ ಭಟ್ಟ, ಕೃಷ್ಣ ಯಾಜಿ ಬಳ್ಕೂರು, ಜಿ.ಎಲ್. ಭಟ್ಟ ಇಡಗುಂಜಿ, ಪುಂಡರೀಕಾಕ್ಷ ಉಪಾಧ್ಯಾಯ ಅವರಿಗೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನ ನೀಡಿ ಗೌರವಿಸಲಾಯಿತು.
ನಾಟ್ಯೋತ್ಸವದ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ಗೌರವ ಸಮರ್ಪಿಸಿದರು. ಆರ್.ಟಿ. ಹೆಬ್ಬಾರ್ ಮತ್ತು ಎಲ್.ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಬಿ.ಎಂ. ಭಟ್ಟ ಸನ್ಮಾನಿತರನ್ನು ಅಭಿನಂದಿಸಿದರು.
ಕೃಪೆ :
http://www.kannadaprabha.com
|
|
|